Thursday, October 2, 2008

No Parking

ನಾನು ಲೋಟಸ್ ಇಂದ ಹೊರಗೆ ಬಂದಾಗ ಎಂಟುವರೆ ರಾತ್ರಿಯಾಗಿತ್ತು. ಬೇಗ ಮನೆಗೆ ಹೋಗಬೇಕೆಂಬ ಆತುರದಲ್ಲಿ ಸ್ಕೂಟರ್ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದರೆ, ಜಾಗ ಖಾಲಿ ! ಆಯ್ಯೊ ರಾಮ, ಎಲ್ಲಿ ಹೋಗಲು ಸಾಧ್ಯ ? ಹಿಂದೆ ತಿರುಗಿ ನೋಡಿದರೆ, No Parking ಬೋರ್ಡು. ಹೀಗೋ ಗ್ರಹಚಾರ, ಸರಿ, ಅಲ್ಲೆ ನಿಂತಿದ್ದ ಇಸ್ತ್ರಿ ಗಾಡಿಯವನನ್ನು ಕೇಳಿದೆ, ಅವನು "ಗಾಡಿನಾ? ಆದು ಜೀವನ್ ಭಿಮಾ ನಗರ ಪೋಲೀಸ್ಟೇಷನ್‌ಗೆ ಹೋಗುತ್ತೆ." ಅಂದ. ಸರಿ, ಜ್ಜಾನಿ ಆಫೀಸ್ ಪೋಲೀಸ್ಟೇಷನ್ ಹತ್ತಿರವೇ ಇರುವುದರಿಂದ ಅವನಿ ಅಲ್ಲಿಗೆ ಸ್ವಲ್ಪ ಹೋಗಿ ನನ್ನ ಸ್ಕೂಟರ್ ಎನಾದರು ಕಣುತ್ತ ನೋಡು ಅಂತ ಹೇಳಿದೆ. ಆವನು, ಅದು ಅಲ್ಲೇ ನಿಂತಿದೆಯೆಂದು, ನಾನು ಈಗಲಿಂದ ಈಗಲೇ ಬಂದು ಮುನ್ನೂರು ರೂಗಳನ್ನು ಪಾವತಿಸಿ ಬಿಡಿಸಿಕೊಳ್ಳಬೇಕೆಂದು, ಇಲ್ಲದಿದ್ದರೆ, ಇನ್ನರ್ಧ ಗಂಟೆಯಲ್ಲಿ ಪೋಲೀಸ್ಟೇಷನ್ ಬಾಗಿಲು ಹಾಕುತ್ತರೆಂದು ಹೇಳಿದ. ಇದ್ಯಾವ ಕಷ್ಟ ವಕ್ಕರಿಸಿತು, ಎಂಟುವರೆ ರಾತ್ರಿಯಲ್ಲೂ ಪೋಲೀಸ್ ಇಷ್ಟೊಂದು ಕೆಲಸ ಮಾಡಿದರೆ ಹೇಗೆ ? ಒಂದು ಆಟೋಹಿಡಿದು ಹೋಗುವುದು ಅಂತ ಅಂದುಕೋಡರೆ ಯಾವ ಆಟೊನೂ ಬರಲಿಲ್ಲ. ಎಲ್ಲಾ ದೂರದಿಂದಲೇ, ಆಮೆ, ಚಿಪ್ಪಿಂದ ತಲೆ ಹೊರ ಹಾಕುವಂತೆ ಆಟೋಯಿಂದ ತಲೆ ಹೊರಹಾಕಿ 'ಎಲ್ಲಿಗೆ’ ಎಂಬಂತೆ ನೋಡುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಆಟೋ ವಿರುದ್ಧದ್ದಿಕ್ಕಿನಲ್ಲೇ ಹೋಗುತ್ತಿತ್ತು. ಆದರೆ ನನ್ನ ಉತ್ತರದಿಂದ ಅದು ಈಗ ತಿರುಗಿ ಬಿಡುತ್ತದೆ ಎಂದು ತಿಳಿದು ಜೋರಾಗಿ "ಜೆ ಬಿ ನಗರ್ ಪೋಲೀಸ್ಟೇಷನ್" ಅಂತ ಕೂಗು ಹಾಕಿದರೆ, ಯಾವುದೋ ಮಾಯದಲ್ಲಿ, ಆಮೆ ತಲೆ ಚಿಪ್ಪಿನಲ್ಲಿ ಮಾಯವಾಗಿ, ಸುತ್ತಮುತ್ತಿನವರು ಇದ್ಯಾಕೆ ಈ ಹೆಂಗಸು ಈ ತರ ಮೇಲಿಂದ ಮೇಲೆ ಕಿರುಚಿಕೊತಾ ಇದೆ ಅಂತ ನೋಡುವಂತಾಗುತ್ತಿತ್ತು.

ಅಂತೂ ನಡೆದೇ ಹೋದೆ. ಅಲ್ಲೇ ಹೊರಗೆ ನನ್ನ ಸ್ಕೂಟರ್ ನಿಂತಿತ್ತು. ಆದರ ನಂಬರ್ ಸರಿಯಾಗಿ ನೋಡಿಕೊಂಡು ಒಳನಡೆದೆ. ಇಲ್ಲದಿದ್ದಲ್ಲಿ ಅದಕ್ಕೆ ಮತ್ತೆರಡು ಮಾತು ಕೇಳಬೇಕಾಗುತ್ತದೆಂದು. ಒಳಗೆ ಒಂದು ಕ್ಯು. ಆದರೆ ಕ್ಯುನಲ್ಲಿ ಯಾವ ಲೇಡೀಸೂ ಇರಲ್ಲಿಲ್ಲ. ಹಾಗಾಗಿ ಎಲ್ಲರೂ ಗೌರವಯುತವಾಗಿ "ನೀವು ಮುಂದೆ ನಡೆಯಿರಿ ಮೇಡಮ್" ಅಂತ ಕಳುಹಿಸಿಕೊಟ್ಟರು. ಆಲ್ಲಿ ಒಬ್ಬ ಎರಡೆರಡು ದೊಡ್ಡ ಪುಸ್ತಕಗಳ ತುಂಬಾ ನನ್ನಂತಾ ಇನ್ನೊಂದು ಪ್ರಾಣಿಯ ಡೀಟೇಲ್ಸ್ ಬರಿತಾಇದ್ದ. ಆಗಲೇ ಕೊನೆಗೆ ಬಂದಿತ್ತು ಅಂತ ಕಾಣಿಸುತ್ತದೆ,

"ಆರ್ ಟಿ ಓ?"
"ರಾಜಸ್ಥಾನ್."
"ರಾಜಸ್ಥಾನ್ ?"
"ರಾಜಸ್ಥಾನ್."
"ಎಲ್ಲೆಲ್ಲಿಂದೋ ಬಂದು ಎಲ್ಲೆಲ್ಲೋ ಪಾರ್ಕ್ ಮಾಡ್ತಾರೆ !" ಅಂತ ಪೋಲೀಸ್ ಗೊಣಗಿದ. ಅಷ್ಟರಲ್ಲಿ, ಒಬ್ಬರು ದೊಡ್ಡ ಪೋಲೀಸಿನವರು, ಡ್ರೆಸ್ಸ್ ನಲ್ಲಿ ಇರುವವರು. ಹೋರಬಂದರು. "ಏನಪ್ಪ, ಇನ್ನೂ ಬರಿತಾನೆ ಇದ್ದೀಯ? ಗುಂಡಗೆ ಬರಿಬೇಕು ಅಂತಾ ಇದ್ದರೆ ದಿನಮುಗಿದರೂ ಆಗಲ್ಲ, ಬೆಗಬೇಗ ಬರಿ. ಲೇಡೀಸೆಲ್ಲಾ ಇದ್ದಾರೆ, ದೂರದೂರಕ್ಕೆಲ್ಲಾ ಹೋಗಬೇಕಿರುತ್ತೆ, ಲೇಟಾಗಿ ಮನೆಗೆ ಹೋಗಿ, ಪೋಲೀಸ್ಟೇಷನ್‌ಗೆ ಹೋಗಿದ್ದೆ ಅಂತ ಹೇಳಕ್ಕಾಗುತ್ತಾ? ಬೇಗ ಬರಿ." ಅಂತ ಹೇಳಿದ. ತಕ್ಷಣ ನನ್ನ ಬಲಗಡೆಯಲ್ಲಿ ನಿಂತಿದ್ದ ಹುಡುಗ, ಮೊಬೈಲಲ್ಲಿ ಏನೋ ಮೆಸ್ಸೇಜ್ ನೋಡುತ್ತಾಯಿದ್ದವನು, ತಲೆ ಎತ್ತದೆ, "ನಾನು ಒಂದುವರೆ ಗಂಟೆಯಿಂದ ಕಾಯುತ್ತಾ ಇದ್ದೀನಿ." ಅಂತ ಗುಟುರು ಹಾಕಿದ. "ಒಂದುವರೆ ಗಂಟೆಯಿಂದನಾ? ನಾವು ಗಾಡಿ ತಂದಿರುವುದೇ ಅರ್ಧ ಗಂಟೆ ಹಿಂದೆ? ಒಂದುವರೆ ಗಂಟೆಯಿಂದ ಇಲ್ಲೇನು ಮಾಡ್ತಾ ಇದ್ದೀರ?" ಅಂದ ಬರೆಯುತ್ತ ಇದ್ದಾತ. "ಹುಂ, ಕೊಡಿ ಮೇಡಂ, ನಿಮ್ಮ ಡಿಎಲ್ಲು." ಎಂದ. ನನ್ನ ಡಿಎಲ್ಲೋ, ಪೂರ್ತೀ ಜೀರ್ಣವಾಗಿ ಹೋದಂತಿತ್ತು. "ಏನು ಮೇಡಂ, ಇದು ನೀವಾ ? ನೀವೇ ಆಗಿದ್ದರೆ ಎಲ್ಲಿ ಇದನ್ನು ಓದಿಹೇಳಿ" ಅಂತ ನನಗೇ ವಾಪಸ್ಸು ಕೊಟ್ಟ. ನಾನು, ಅಯ್ಯೋ ಪರಮಾತ್ಮಾ, ಇದೊಂದು ಟೆಸ್ಟ್ ಪಾಸ್ ಮಾಡಿಸು, ನನ್ನ ಆರನೇ ಇಂದ್ರಿಯ ಇದನ್ನು ಓದಬೇಕಷ್ಟೇ ಅಂತ ಕಣ್ಣಗಲಿಸಿ, ಅಂತೂ ಡಿಎಲ್ ನಂಬರ್ ಓದಿದೆ. "ಹುಂ, ಹೆಸರು?", "ಗಾಡಿ ನಂಬರ್?", "ಆರ್ ಟಿ ಓ?". ಆರ್ ಟಿ ಒ, ಕೇಳಿದ ತಕ್ಷಣ ಕೊನೆಬಂತು ಅಂತ ಭಾವಿಸಿದೆ.

ಇಷ್ಟರಲ್ಲಿ, ನನ್ನ ಎಡಗಡೆ ಇದ್ದ ಪುಣ್ಯಾತ್ಮ, ಆಗ ಈಗ "ಸಾರ್...ಸಾರ್, ಮಂತ್ ಎಂಡು ಸಾರ್, ಮುನ್ನೂರಿಲ್ಲ, ನೂರುಮಾಡಿಕೊಳ್ಳಿ." ಅಂತ ಭಕ್ತಿಯಿಂದ ದುಂಬಾಲುಬೀಳುತ್ತಿದ್ದ. ಅದಕ್ಕೆ ಬರಿಯುತ್ತಿದ್ದವನು "ಮಂತ್ ಎಂಡ್ ಯಾಕ್ರೀ ಅಲ್ಲಿ ಪಾರ್ಕ್ ಮಾಡಕ್ಕೆ ಹೋದ್ರಿ ? ಲಾಸ್ಟ್ ಮಂತ್ ನೂರು ರೂಪಾಯಿ ಇತ್ತು, ಈಗ ರೇಟೆಲ್ಲಾ ಜಾಸ್ತಿಯಾಗಿದೆ. ಇದು ನಾನು ತೊಗೊತಾ ಇರೋ ದುಡ್ಡಲ್ಲ, ಸರ್ಕಾರ ಫಿಕ್ಸ್ ಮಾಡಿರೋದು. ಕೊಡಬೇಕಾಗುತ್ತೆ." "ಹುಂ, ಮೇಡಂ, ಆರ್ ಟಿ ಒ ಯಾವುದು ಹೇಳಿ "ಅಂದ. "ಚಿಕ್ಕಮಗಳೂರು." ಆವನು ಬರೆಯುವುದನ್ನು ನಿಲ್ಲಿಸಿ, "ಚಿಕ್ಕಮಗಳೂರ? ಅಲ್ಲೆಲ್ಲಿ?" ಅಂದ. "ಮೂಡಿಗೆರೆ" ಅಂದೆ. ಆಷ್ಟರಲ್ಲಿ ದೊಡ್ಡಸಾಹೆಬ್ರು "ಸಾಕು ಸಾಕು ಮಾತು, ಬೇಗ ಬರೆದು ಮನೆಗೆ ಕಳಿಸು" ಅಂತ ಕೂಗಿದರು. ಆಷ್ಟರಲ್ಲಿ ಇನ್ನೊಬ್ಬ ಡ್ರೆಸ್ಸಲ್ಲಿಇಲ್ಲದ ಸಹಚರ "ಅಯ್ಯೊ, ಇನ್ನೂ ಮುಗಿದಿಲ್ಲವ? ನಾನು ಬೇಗ ಬೇಗ ಬರಿತೀನಿ, ಇಬ್ಬರೂ ಬೇಗ ಮುಗಿಸೋಣ" ಅಂತ ಪುಸ್ತಕ ತೆಗೆದುಕೊಂಡ. ಎಡಗಡೆ ನಿಂತಿದ್ದ ಮೊಬೈಲ್ ಮಹಾಷಯ ಮುನ್ನೂರು ರೂಗಳನ್ನು ಅವನೆಡೆಗೆ ದೂಕಿದ. "ಏಲ್ಲಿ ಪಾರ್ಕ್ ಮಾಡಿದ್ದಿರಿ?" ಅಂದ. "ನೀವೆ ಗಾಡಿ ತಂದಿದ್ದು, ನಿಮಗೇ ಗೊತ್ತಿಲ್ಲವ?" ಅಂದ ಈತ. "ಎರಡು ಮೂರು ರಸ್ತೆಗಳಿಂದ ತಂದಿದ್ದೀವೆ. ಬೇಗ ಮುಗಿಯ ಬೇಕು ಅಂದ್ರೆ, ಬೇಗ ಹೇಳಿ" ಅಂದ. "ಸಿಎಮ್‌ಹೆಚ್ ರಸ್ತೆ, ಸಿಟಿ ಬ್ಯಾಂಕ್ ಎದುರಿಗೆ. ಅಲ್ಲಿ ಪಾರ್ಕಿಂಗ್ ಅಂತ ಬರೆದಿತ್ತು, ಆದ್ರೆ ಬ್ಯಾಂಕ್ ಒಳಗೇ ತೆದುಕೊಂಡು ಹೋಗಿ ಪಾರ್ಕ್ ಮಾಡಬೇಕು ಅಂತ ನಮಗೇನು ಗೊತ್ತಿತ್ತು !" ಅಂತ ಈತ ಪೋಲೀಸ್‌ಗೇ ಹೇಳಿದ. ಅದಕ್ಕೆ ಪೋಲೀಸ್, ಪೆನ್ನು ಕೆಳಗಿಟ್ಟು, ”ಸಿಎಮ್‌ಹೆಚ್ ರಸ್ತೆಲಿ, ಇದ್ದಿದ್ದ ಸಿಟಿ ಬ್ಯಾಂಕ್ ಒಡೆದುಕಾಕಿದ್ದಾರಲ್ಲ ? ಎಲ್ಲಿ ನಿಲ್ಲಿಸಿದ್ರಿ ? ಇನ್ಫರ್ಮೇಷನ್ ಕರೆಕ್ಟಾಗಿರ್ಬೇಕು" ಅಂದ. "ಅದ್ಯಾವುದೋ ಒಂದು ಸುಡುಗಾಡು ರೋಡು, ಯಾವುದಪ್ಪಾ ? ಉಂ..." ಅಂದ. "1೦೦ ಫೀಟ್ ರೋಡಲ್ಲೇನೊ ಒಂದು ಸಿಟಿ ಬ್ಯಾಂಕ್ ಇದೆ" ಅಂದೆ. ಅದಕ್ಕೆ ಪೋಲೀಸ್ "ಯಾಕ್ ಮೇಡಂ, ನೀವು ಅಲ್ಲಿ ಸಿಕ್ಕಿಹಾಕಿಕೊಂಡಂತಿದೆ?" ಅಂದ. ಆಗ ಮತ್ತೆ ದೊಡ್ಡಸಾಹೆಬ್ರು "ಆಯ್ತಾ ಮೇಡಮ್, ಆದ್ರೆ ಇಲ್ಲಿಂದ ಜಾಗ ಖಾಲಿ ಮಾಡಿ, ಕ್ಯೂನಾದ್ರು ಕಡಿಮೆ ಆಗ್ಲಿ" ಅಂದರು. ನಾನು ಅಲ್ಲಿಂದ ಹೊರಡುತ್ತಿದ್ದಂತೆ, "ಎನ್ರಿ, ನೀವು ನನ್ನನು ನೋಡಿಕೊಂಡು ಮಾತಾಡಿ, ಮೊಬೈಲಿಗೇ ಮಾತಾಡುವಹಾಗಿದ್ದರೆ, ಅದನ್ನೂ ಕಿತ್ತಿಟ್ಟುಕೊಂಡು ಆರುನೂರು ಹಾಕಿಬಿಡುತ್ತೇನೆ ಅಷ್ಟೆ. ಸರಿಯಾಗಿ ಎಲ್ಲಿ ನಿಲ್ಲಿಸಿದ್ದಿರಿ ಹೇಳಿ" ಎಂದೂ, ಸಾರ್, ಸಾರೆಂಬ ಕ್ಷೀಣ ಸ್ವರವೂ ಕೇಳುತ್ತಾ ಇತ್ತು.

12 comments:

Unknown said...

Nice...

ಹಳ್ಳಿಕನ್ನಡ said...

ತುಂಬಾ ಚೆನ್ನಾಗಿ ಬರೆದಿದ್ದೀರ. ಇನ್ನು ಪೂಚಂತೆ ಬಗ್ಗೆ ಬರಿಲಿಕ್ಕೆ ಉಂಟಲ್ವಾ?
- ಮಂಜುನಾಥಸ್ವಾಮಿ

ಆಲಾಪಿನಿ said...

ಈಶಾನ್ಯೆ ಮೇಡಮ್, ಬರೀರಿ ಬರೀರಿ
ಮತ್ತೆ ಮತ್ತೆ ಓದ್ತೀವಿ.

Unknown said...

ಚೆನ್ನಾಗಿದೆ.. ಮತ್ತೇನು ಬರೆಯುತ್ತೀರಿ ಎಂಬ ಕುತೂಹಲವಿದೆ...
ಹೆಚ್ಚು ಕಾಯಿಸುತ್ತೀರಾ?

mala rao said...

ಬರಹ ಓದಿಸಿಕೊಂಡು ಹೋಯಿತು
ನಾನೂ ಒಮ್ಮೆ ಪೋಲೀಸ್ ಸ್ಟೇಶನ್ನಿಗೆ ಹೋಗಿದ್ದೆ ನಮ್ಮ ಗಾಡಿಯ ಟಿ.ಸಿತರಲು
ಹಂಗೆಲ್ಲಾ ಲೇಡೀಓಸು ಸ್ಟೇಶನ್ನಿಗೆ ಬರಬಾರದು ಅಂತ ಟಿಸಿ ಜೊತೆ ಉಪದೇಷ ಕೊಟ್ಟು ಪೋಲೀಸಪ್ಪಗಳು ಕಳಿಸಿದ್ದು ನೆನಪಾಯ್ತು

ಹರೀಶ್ ಕೇರ said...

Good one. Just like Tejaswi, u r also maintaining the wit in writing.
- Harish Kera

ಚಂದ್ರಕಾಂತ ಎಸ್ said...

ಇಲ್ಲಿಗೆ ಬರೆಯೋ ಕಾಮೆಂಟ್ ಮುಂದಿನ ಬರಹಕ್ಕೆ ಬರೆದಿರುವೆ. ಚೆನ್ನಾಗಿದೆ.
ಮತ್ತಷ್ಟು ಬರವಣಿಗೆಗಳನ್ನು ಎದುರು ನೋದುತ್ತಿರುವೆ

Veena Shivanna said...

Very Nicely written. Specially the RTO part of it.. :-)

Even I had a similar experience with the traffic police and no parking thing. Fortunately, they didn't tow away my car but were just waiting for me to return and collected the fine on the spot.
I had parked just aside the No Parking board(much longer than 100M) but they said, its parked in the no parking area, the whole road is no parking but generally its 100mts from the board.

I didn't win the argument anyway!!

ಮುತ್ತುಮಣಿ said...

ನಾನು ಮೊದಲು ಬಿ ಟಿ ಎಸ್ ನಲ್ಲಿ ಓಡಾಡುತ್ತಿದೆ. ಈಗ ಬಿ ಎಮ್ ಟಿ ಸಿ ಯಲ್ಲಿ!

ಒಂದು ಬೇರೆ ಜಗಕ್ಕೆ ಹೋಗಿ ಬಂದ ಅನುಭವವಾಯಿತು.

Unknown said...

Tumba chennagide....Every day I visit ur site. Sometimes I feel eno update illa anta...ur family has that divine power to keep the readers at their toes...nice to know you are writing. Keep it going...

-- Anand Alur

DCM said...

ಚೆನ್ನಾಗಿದೆ. ನಾನು ತುಂಬಾ ಸರ್ತಿ ಲೈಸೆಂನ್ಸ್ ಇಲ್ಲದೆ ಗಾಡಿ ಓಡಿಸಿ ಸಿಕ್ಕಿಬಿದ್ದು ಫೈನೂ ಕೂಡ ಕಟ್ಟದೆ ಪಾರಾಗಿದಿನಿ :)

Unknown said...

ಈಶಾನ್ಯೆ
ಮೇಡಂ ಬೆಂಗಳೂರಿನ ಟ್ರಾಫಿಕ್, ಟ್ರಾಫಿಕ್ ಪೊಲೀಸ್ ಅವರ ರಗಳೆ ಬಗ್ಗೆ ಬರೆದಿದ್ದೀರಿ. ಆದರೆ ರೂಲ್ಸ್ ಅನ್ನುವುದಕ್ಕೆ ಒಂದಿಷ್ಟೂ ಗೌರವ ಕೊಡದ ಜನರಿರುವ ತನಕ ಪೋಲೀಸರಿಗೂ ಕೈತುಂಬ ಕೆಲಸ!
ಒಮ್ಮೆ ಸರಿಯಾದ ಜಾಗದಲ್ಲೇ ಗಾಡಿ ನಿಲ್ಲಿಸಿದ್ದರೂ, ಲಾಕ್ ಮಾಡಿಲ್ಲ ಎಂದು ಬೀಟ್ ಪೋಲೀಸಿನವರು ಎತ್ತಿಕೊಂಡು ಹೋಗಿ ಮರೆಯಲ್ಲಿ ನಿಲ್ಲಿಸಿ ದುಡ್ಡು ಕೇಳಲು ನೋಡಿದರು. ನಾನೂ ಸಾಕಷ್ಟು ಆಟವಾಡಿಸಿ, ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಹೆಸರು ಹೇಳಿ ತಪ್ಪಿಸಿಕೊಂಡಿದ್ದೆ.
ಹೀಗೇ ಬರೆಯುತ್ತಿರಿ. ಭೂತಕಾಲದ ಬಗ್ಗೆ ಸ್ವಾರಸ್ಯವಾಗಿ ಬರೆಯುವುದು ಸುಲಭ. ಆದರೆ ವಾಸ್ತವವನ್ನು ಸರಸ ಸರಳವಾಗಿ ಬರೆಯುವುದು ಕಷ್ಟದ ಕೆಲಸ. ಆದರೆ ನೀವು ಯಶಸ್ವಿಯಾಗಿದ್ದೀರಿ.