Sunday, January 4, 2009

ಅಂತೂ ಇಂತೂ ಎವೆರೆಸ್ಟ್ ಕಾಣ್ತು

ಆರನೇ ದಿನ (ಮೇ , ೨೦೦೮)
ನಾಮ್ ಚೆ ಬಜಾರ್ (3489 ಮೀ/11443 ಅಡಿ) - ತೆಂಗ್ ಬೊಚೆ (3870 ಮೀ/12693 ಅಡಿ)

ಇಂದಿನಿಂದ ಎಲ್ಲರ ಏಕಾಗ್ರತೆಯೂ ಬೇಸ್ ಕ್ಯಾಂಪ್ ತಲುಪು ಕಡೆಗೇ. ಅದಕ್ಕಾಗಿ ಎಲ್ಲಾರೂ ಅವರವರಿಗೆ ಯಾವುದು ಸರಿಹೋಗುತ್ತೊ ಅದನ್ನು ಮಾಡಿಕೊಳ್ಳುತ್ತಿದ್ದರು. ನಾಮ್ ಚೆ ಬಜಾರಿಗೆ ಬರುವ ದಾರಿಯಲ್ಲಿ ಎಲ್ಲರಿಗೂ ಅವರವರ ಯೋಗ್ಯತೆ ಏನೆಂದು ಗೊತ್ತಾಗಿತ್ತು. ಹಾಗಾಗಿ, ಶೀಲಾ ಕ್ಯಾಸ್ಟಿಲಿನೊರವರು ಒಬ್ಬ ಪೋರ್ಟರನ್ನು ಅವರ ಚೀಲ ಹೊತ್ತುತರಲು ಗೊತ್ತು ಮಾಡಿಕೊಂಡರು. ಆದರೆ ಅವನು ಚೀಲ ಹೊತ್ತು ಕೊಳ್ಳುತ್ತಿರುವಾಗ, ಯಾಕೋ, ಚೀಲ ಅವರ ಹಿಂದಿದ್ದ ಚೀಲಕ್ಕಿಂ ತೀರ ದೊಡ್ಡದಾಗಿ ಬೆಳೆದಂತೆ ಕಾಣುತ್ತಿತ್ತು ! ಅಲ್ಲದೆ ಶೀಲಾ ಜೊತೆಗಿದ್ದ ಆರತಿ ಯಾದವ್ ಅವರ ಚೀಲ ಸಣ್ಣದಾದಂತೆಯೂ ಹಾಗು ಆರತಿ ಬಹಳ ಉಲ್ಲಾಸದಿಂದ ಕುಣಿಕುಣಿದು ನಡೆದಂತೆಯೂ ಕಾಣುತ್ತಿತ್ತು. ಏನೋ, ನಮಗೇನಂತೆ, ನಾನೇ ನನ್ನ ರ್ಧ ಚೀಲವನ್ನು ಜ್ಞಾನಿಯ ಚೀಲದಲ್ಲಿ ಹಾಕಲು ನಿರ್ಧರಿಸಿದ್ದೆ. ಜ್ಞಾನಿ ಹಾಗೂ ಸಂದೀಪ್ ಒಬ್ಬ ಪೋರ್ಟರನ್ನು ಗೊತ್ತುಮಾಡಿಕೊಂಡಿದ್ದರು. ವಸುಮತಿಯವರು, ನಮ್ಮ ಲಾಡ್ಜಿನವನೊಡನೆ ಮಾತಾಡಿ, ನಮಗೆ ಸಧ್ಯಕ್ಕೆ ಬೇಡದಿರುವ ಬಟ್ಟೆಗಳನ್ನು ಸಾಮಾನುಗಳನ್ನು ಲಾಡ್ಜಿನಲ್ಲೇ ಬಿಟ್ಟು ಹೋಗುವ ವ್ಯವಸ್ಥೆಮಾಡಿದರು. ನಮಗೆ ನಮ್ಮ ಕೋಣೆಯ ಸಂಗಾತಿ ಜೊತೆ ಪೇಸ್ಟ್ ಮತ್ತಿತರ ಸಾಮಾನುಗಳನ್ನು ಹಂಚಿಕೊಳ್ಳುವಂತೆ ಸಲಹೆ ಕೊಟ್ಟರು. ಇವುಗಳನ್ನೆಲ್ಲಾ ತೆಗೆದಿಟ್ಟಾದಮೇಲೆ, ಉಳಿದ ಚೀಲದಲ್ಲರ್ಧ ನಾನು ಜ್ಞಾನಿಯ ಚೀಲದಲ್ಲಿ ಹಾಕಿದೆ. ಪ್ರಿಯಾ ಸಹ ಕೆಲವು ಬಟ್ಟೆಗಳನ್ನು (ಬೆಚ್ಚನೆಯ ಜಾಕೆಟ್ - ಅದು ಬಹಳ ದಪ್ಪದಾಗಿದ್ದು, ಅವಳಿಗೆ ಯಾವಾಗಲೂ ತೊಂದರೆ ಕೊಡುತ್ತಿತ್ತು.) ಜ್ಞಾನಿಯ ಚೀಲದಲ್ಲಿ ತುರುಕಿಳು. ಇದೆ ರೀತಿಯಾಗಿ ಸಪ್ನ ಸಹ ಸಂದೀಪನ ಚೀಲದಲ್ಲಿ ತುರುಕಿದ್ದಳು. ಇನ್ನೂ ಯಾರ್ಯಾರು ಯೆಲ್ಲೆಲ್ಲಿ ಏನೇನು ತುಂಬಿದ್ದರೆಂದು ನನಗೆ ಸರಿಯಾಗಿ ಗೊತ್ತಿಲ್ಲ, ಆದರೆ ಮರುದಿನ ಎಲ್ಲರ ಚೀಲಗಳು ಸ್ವಲ್ಪ ಇಳಿದು ಹೋಗಿದ್ದವು. ವಸುಮತಿ ಮತ್ತು ಸ್ಮಿತರ ಚೀಲಗಳು ಮಾತ್ರ ಇದ್ದ ಹಾಗೇ ಇದ್ದವು. ಆದರೆ ಅವರಿಗೆ ಇದೆಲ್ಲಾ ಅಭ್ಯಾಸವಿದ್ದುದ್ದರಿಂದ ಎಷ್ಟು ಬೇಕೋ ಅಷ್ಟು ಮಾತ್ರ ಅವರು ತಂದಿದ್ದುರಿಂದಲೋ ಏನೊ ಅವರು ಯಾವ ದಣಿವು ಇಲ್ಲದೆ ನಡೆಯುತ್ತಿದ್ದರು.

ವಸುಮತಿಯವರು
, ನಮಗೆ ಹೊರಡುವ ಮೊದಲು ದಿನದ ದಿನಚರಿಯನ್ನು ಹೇಳುವ ವಾಡಿಕೆ ಇತ್ತು. ನಮ್ಮ ಮುಂದಿ ಜಾಗ ತೆಂಗ್ ಬೊಚೆ. ಅದರ ನಂತರದ ದಿನ ನಾವು ಫೆರಿಚೆ ಗೆ ಹೋಗುವವರಿದ್ದೆವು. ಆದರೆ ಅದು ತೆರೆದ ಜಾಗದಲ್ಲಿದ್ದುದ್ದರಿಂದ ಅಲ್ಲಿ ತುಂಬಾ ಗಾಳಿ ಹಾಗು ಥಂಡಿ. ಅದನ್ನು ರೂಢಿಸಿಕೊಳ್ಳಲು ಅಲ್ಲಿ ಬೆರೆಲ್ಲರೂ ಒಂದು ದಿನ ಇದ್ದು ಅಕ್ಲಿಮಟೈಸೇಶನ್ ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಪ್ರಯಾಣದಲ್ಲಿ ಅಲ್ಲಿ ಒಂದುದಿನ ನಿಲ್ಲುವ ಉದ್ದೇಶ ಇರಲ್ಲಿಲ್ಲ. ಹಾಗಾಗಿ ನಮಗೆಲ್ಲಾ ಸರಿಹೋಗುವುದೋ ಇಲ್ಲವೂ ಎಂದು ಅವರಿಗೆ ಸ್ವಲ್ಪ ಕಸಿವಿಸಿಯಾಗಿತ್ತು. ಆದರೆ, ನಮ್ಮ ಲಾಡ್ಜಿನ ಮಾಲೀಕನ ಹತ್ತಿರ ಮಾತನಾಡಿ ಅವನ ಸಲಹೆಯಂತೆ ನಮ್ಮ ದಾರಿಯನ್ನು ಫೆರಿ ಚೆಗೆ ಹೋಗುವ ಬದಲು ದಿಂಗ್ ಬೋ ಚೆ ಗೆ ತಿರುಗಿಸಿದರು. ಹಾಗೂ ಪುನಃ ಹಿಂತಿರುಗಿ ಬರುವಾಗ ನಾವು ಫೆರಿ ಚೆ ಮೂಲಕ ಬರುವವರಿದ್ದೆವು. ವಸುಮತಿಯವರು ನಮಗೆ ದಾರಿಯನ್ನು ವಿವರಿಸುವಾಗ, ’ ನೀವೆಲ್ಲಾ ನಿಮ್ಮ ಜೀವಮಾನದಲ್ಲಿ ನೆನಪಿಟ್ಟುಕೊಳ್ಳುವಂತಹ ಕಡಿದಾದ ದಾರಿ ಹತ್ತುವವರಿದ್ದೀರ, ಎಲ್ಲರಿಗೂ ಆಗುವಂತಹ ನಡಿಗೆಯಲ್ಲಿ ನಾವು ಮುಂದುವರಿಯುತ್ತೇವೆ. ಯಾರಿಗೆ ಯೇನೇ ಆದರೂ ಅದನ್ನು ಗೌಣವಾಗಿ ಭಾವಿಸದೆ ನನಗೆ ಹೇಳಬೇಕು. ಅಲ್ಲದೆ ಎಲ್ಲರೂ ನಿಮ್ಮ ನಿಮ್ಮ ಜೊತೆಯವರೊಡನೆ ನಡೆಯಿರಿ (ಇದಕ್ಕೆ ಬಡಿ (buddy) ಸಿಸ್ಟಮ್ ಅನ್ನುತ್ತಾರೆ. ಪರ್ವತಾರೋಹಣದಲ್ಲಿ ಇಬ್ಬಿಬ್ಬರು ಒಟ್ಟೊಟ್ಟಿಗಿರುತ್ತಾರೆ, ಒಬ್ಬರು ಐಸ್ ಒಡೆದಲ್ಲಿ ಇನ್ನೊಬ್ಬರು ಕಾಲಿಡುತ್ತಾರೆ, ಇಬ್ಬರೂ ಒಂದೇ ಹಗ್ಗ ಉಪಯೋಗಿಸುತ್ತಾರೆ, ಒಂದೇ ಗುಡಾರಲ್ಲಿರುತ್ತಾರೆ. ಒಬ್ಬರ ಯೋಗಕ್ಷೇಮ ಇನ್ನೊಬ್ಬರು ನೋಡಿಕೊಳ್ಳುತ್ತಾರೆ). ನಮ್ಮದು ಪರ್ವತಾರೋಹಣವಲ್ಲದಿದ್ದರೂ ವಸುಮತಿಯವರಿಗೆ ಇವನ್ನೆಲ್ಲಾ ಅನುಸರಿಸಲು ಬಹಳ ಇಷ್ಟವಿದ್ದಂತೆ ತೋರುತ್ತಿತ್ತು. ಅವರು ಬೇಕಾದಷ್ಟು ಸಲ ನಮ್ಮ ಟ್ರೆಕ್ ಅನ್ನು expedition ಎಂದು ಪ್ರಸ್ತಾಪಿಸಿ, ಕೆಲವು ನಿಯಮಗಳನ್ನು ಹಾಕುತ್ತಿದ್ದುದು, ನಮ್ಮಲ್ಲಿ ಹಲವರಿಗೆ ಸಿಟ್ಟುಬರಿಸಿತ್ತು. ವಸುಮತಿಯವರನ್ನು, ’ನಾವೇಕೆ ಜೋಡಿಯಾಗಿ ಜೊತೆಯಲ್ಲಿರಬೇಕು ? ಎಂತಿದ್ದರೂ ಎಲ್ಲರೂ ನಿಧಾನವಾಗಿ ನಡೆಯುತ್ತಿದ್ದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆಯಲ್ಲವೇ ? ಅಷ್ಟೆ ಅಲ್ಲದೆ, ಇದು ಹೈವೆ ಅಂತಹ ದಾರಿ, ಯಾರಾದರೂ ಪರ್ವತಾರೋಹಿ ಅಥವಾ ಪೋರ್ಟರ್ ಸಿಕ್ಕೇಸಿಗುತ್ತಾರಲ್ಲಎಂದು ಕೇಳಿದಾಗ, ’ಪರ್ವತಗಳಲ್ಲಿ ಯಾವಾಗಲೂ ಹೀಗೆ ಹೋಗೋದು. ಒಬ್ಬರು ಸತ್ತರೆ, ಅವರ ಜೋಡಿ ಅದನ್ನು ಸಮರ್ಥಿಸಲು ರಬೇಕುಅಂತ ಹೇಳುವುದೆ !

ಎಂದಿನಂತೆ, ತಿಂಡಿಗೆ ನಾನು ಓಟ್ಸ್ ಗಂಜಿ ತೆಗೆದುಕೊಳ್ಳುವ ಬದಲು, ಮ್ಯುಸಿಲಿ ತೆಗೆದು ಕೊಂಡು ತಪ್ಪುಮಾಡಿದೆ, ಅದರಲ್ಲಿ ಇದ್ದ ಬಾದಾಮಿಗಳು ಹಳೆಯದಾಗಿ ಎಣ್ಣೆ ವಾಸನೆ ಬರುತ್ತಿದ್ದವು. ಅಲ್ಲದೆ, ಮ್ಯುಸಿಲಿ ಗಟ್ಟಿಯಾಗಿದ್ದು, ನುಂಗಲು ಕಷ್ಟವಾಗುತ್ತಿತ್ತು. ಇನ್ನೆಂದೂ ಅದನ್ನು ಆರಿಸಿಕೊಳ್ಳಬಾರದೆಂದು ನಿರ್ಧರಿಸಿದೆ. ಅಂತು ನಾವು ಹೊರಟಾ :೩೦ ಬೆಳಿಗ್ಗೆ. ವಸುಮತಿಯವರು ಹೇಳಿದಂತೆ, ನಾವು ನಾಮ್ ಚೆ ಇದ್ದ ಪರ್ವತವನ್ನು ಪೂರ್ತೀ ಇಳಿಯಲು ಶುರುಮಾಡಿದೆವು. ಬೆಟ್ಟ ಳಿಯುವುದು ಸುಲಭ ಎಂದು ಎಲ್ಲರೂ ತಿಳಿದು ಕೊಳ್ಳುತ್ತೇವೆ, ಆದರೆ ಆಗಲೇ ನಮ್ಮ ಮಂಡಿ, ಪಾದದ ಮಣಿಗಂಟು, ಮತ್ತು ನಮ್ಮ ಪಾದದ ಬೆರಳುಗಳು ಏಟು ತಿನ್ನುವುದು. ಕೆಲವು ಸಲ ಮುಂದೆ ನಡೆಯಲಾರದಂತಾಗುತ್ತದೆ. ಆದ್ದರಿಂದ ಮೊದಲೇ ಸ್ವಲ್ಪ ಇದರ ಕಡೆ ಗಮನ ಇಟ್ಟು ಹುಶಾರಾಗಿ ನಡೆದು, ಮಂಡಿಗಳನ್ನು ಉಳಿಸಿಕೊಳ್ಳಬೇಕು. ಪಾದಗಳನ್ನು ದಾರಿಯ ಮೇಲೆ ನೇರವಾಗಿ ಇಡದೆ, ಅಡ್ಡಗಾಲು ಹಾಕಬೇಕು. ನಾವೆಲ್ಲರೂ (ಬಹುಪಾಲು ಜನಕ್ಕೆ ಮಂಡಿನೋವಿನ ತೊಂದರೆ ಇತ್ತು) ನೀ ಪ್ಯಾಡ್, ankle ಪ್ಯಾಡ್ ಧರಿಸಿದ್ದೆವು. ಇಷ್ಟಲ್ಲದೆ, ಯಾವಾಗ ಬೆಟ್ಟ ಇಳಿಯುತ್ತದೋ ಅದರರ್ಥ ಮುಂದೆ ಅಷ್ಟೇ ಹತ್ತಲಿಕ್ಕೆ ಇದೆ ಎಂದು. ಅದನ್ನು ಯೋಚಿಸಿಕೊಂಡೆ ನಮಗೆ ಯಾಕಾದರೂ ತಗ್ಗು ಬರುತ್ತದೂ ಎನ್ನಿಸುತ್ತಿತ್ತು.

ದಾರಿಯಲ್ಲಿ ಎಲ್ಲೆಲ್ಲಿ ನೋಡಿದರೂ ನೀಲಿ ಆರ್ಕಿಡ್ ಗಳು. ಹಿಂತಿರುಗಿ ಹೋಗುವದಾರಿಯಲ್ಲಿ ಅದನ್ನು ಮೂಡಿಗೆರೆಗೆ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಿದೆ. ಮೂಡಿಗೆರೆಯಲ್ಲಿ ನಾನು ಅಣ್ಣನೊಡನೆ ಸಂಗ್ರಹಿಸಿದ ಅನೇಕ ಆರ್ಕಿಡ್ ಗಳು ಇವೆ. ನೆನಪಿಗೆ, ನನ್ನದೊಂದು ಸಣ್ಣ ಕೂಡಿಕೆ. ಲುಕ್ಲ ಎಂದರೆಆಡು ಮೇಕೆಗಳ ಊರುಅಂತೆ. ಲುಕ್ಲ ಇಂದ ಮುಂದಕ್ಕೆ ಎಲ್ಲೆಲ್ಲೂ ಯಾಕ್ ಗಳು. ಜನ ಕುದುರೆಯ ಮೇಲೆ ಅಥವಾ ಯಾಕ್ ಮೇಲೆ ಹೋಗುವುದನ್ನು ನಾವು ನೋಡಲಿಲ್ಲ. ಎಲ್ಲಾ ಯಾಕ್ ಗಳ ಮೇಲೂ ಹೊರೆ ಸಾಮಾನು ಸರಂಜಾಮುಗಳು. ವಸುಮತಿಯವರು ನಮಗೆ ಹಿಮಾಲಯದಲ್ಲಿನ ಟ್ರೆಕ್ಕಿಂಗ್ ನಡವಳಿಕೆಗಳನ್ನು ಹೇಳಿಕೊಟ್ಟಿದ್ದರು. ಯಾವಾಗಲೂ ಯಾಕ್ ಗಳು ಮತ್ತು ಸಾಮಾನು ಹೊರುವ ಪೋರ್ಟರ್ಗಳಿಗೆ ಬೆಟ್ಟದ ಅಂಚಿ ಪಕ್ಕಕ್ಕೆ ಅಂದರೆ, ನಾವು ಬೆಟ್ಟದ ಪಕ್ಕಕ್ಕೆ ಬಂದು, ಅವರಿಗೆ ಪ್ರಪಾತದ ಅಂಚಿಗೆ ಜಾಗ ಬಿಡಬೇಕು. ಅವರಿಗಾದರೋ ಅಭ್ಯಾಸವಿರುತ್ತದೆ, ನಾವು ಪಕ್ಕಕ್ಕೆ ಹೋದರೆ ಯಾಕ್ ಗಳು ನಮಗೆ ಜಾಗ ಬಿಡದೆ ನಾವು ಪ್ರಪಾತಕ್ಕೆ ಬೀಳುವುದೇ ಸೈ. ಯಾಕ್ ಗಳ ಬಗ್ಗೆ ನನಗೆ ನನ್ನದೇ ಅಭಿಪ್ರಾಯವಿದೆ. ಅವಕ್ಕೆ ಜನರನ್ನು ಕಂಡರೆ ಯವೆನ್ನಿಸುತ್ತದೆ. ಅವುಗಳ ಪುಟ್ಟ ಕಣ್ಣುಗಳು ತಮ್ಮ ಸುತ್ತಮುತ್ತಲಿನ ಜಗತ್ತನ್ನು ಆಳವಾಗಿ ಗಮನಿಸುತ್ತಿರುತ್ತವೆ. ಅವು ನಮ್ಮನ್ನು ದಾಟಿಹೋಗುವಾಗ, ನಾವು ಅಷ್ಟೊಂದು ಗಮನ ಕೊಡದೆ ಸುಮ್ಮನೆ ಜಾಗ ಬಿಟ್ಟರೆ ಸರಿ, ಇಲ್ಲ ಅವುಗಳನ್ನು ದಿಟ್ಟಿಸಿದರೆ ಅವು ಮುಂದೆ ಹೋಗುವುದನ್ನು ಬಿಟ್ಟು ನಮ್ಮ ಚಲನವಲನಗಳನ್ನು ಗಮನಿಸುತ್ತಾ ನಿಲ್ಲುತ್ತವೆ. ಅವುಗಳಿಗೆ ನೀವು ನಿರುಪದ್ರವಿ ಎನಿಸುವವರೆಗೆ ಹೀಗೆ ನಿಲ್ಲುತ್ತವೆ.

ಯಾಕ್ ಗೆ ಜಾಗ ಬಿಡುತ್ತಿರುವುದು

ಹೀಗೆ ನಡೆಯುತ್ತಿರಬೇಕಾದರೆ, ಒಂದು ತಿರುವಿನಲ್ಲಿ ಎಡಗಡೆ ಮೌಂಟ್ ಎವೆರೆಸ್ಟ್, ಹಾಗು ಅದರ ಪಕ್ಕದಲ್ಲಿ ನುಪ್ಸೆ, ಅದರ ಬಲಗಡೆಗೆ ಅಮ-ದಬ್ಲಮ್ ಕಂಡೆವು. ನಾವು ಮೊದಲಸಲ ಎವೆರೆಸ್ಟ್ ನೋಡಿದಾಗ ನಂಬಲೇ ಇಲ್ಲ. ಅದು ಅಂಥದೇನೂ ದೊಡ್ಡದಾಗಿ ಅದ್ಭುತವಾಗಿ ಕಾಣುತ್ತಲಿರಲ್ಲಿಲ್ಲ. ಅಮ-ದಬ್ಲಮ್ ಆದರೊ ಎಂದಿನಂತೆ ಸುಂದರವಾಗಿ ಕಾಣುತ್ತಿತ್ತು. ಹಿಂದೆಲ್ಲ ನಾನು ಅದರ ಫೋಟೊ ನೋಡಿದಾಗ, ಅದನ್ನು ಎಷ್ಟು ನೋಡಿದರೂ ಬೇಜಾರಾಗುವುದಿಲ್ಲ ಅಂದುಕೊಳ್ಳುತ್ತಿದ್ದೆ. ಅದರ ಬುಡಕ್ಕೆ ಹೋಗುವವರಿದ್ದೇವೆ ಎಂದು ಯೋಚಿಸುವುದು ರೋಮಾಂಚನಕಾರಿಯಾಗಿತ್ತು. ಈಗ ದೂರದಿಂದ ನೋಡಿದ ಅಮ-ದಬ್ಲಮ್ ಮುಂಬರುವ ದಿನಗಳ ರೋಮಾಂಚನದ ಒಂದು ಝಲಕ್ ಆಗಿತ್ತು. ಅಮ-ದಬ್ಲಮ್ ಗೂ ಮೌಂಟ್ ಎವೆರೆಸ್ಟ್ ಗೂ ಮಧ್ಯೆ ಬಹಳ ದೂರವಿದೆ. ಆದರೆ ಹಿಮಾಲಯದಲ್ಲಿ distance is deceptive. ನಾಚೆ ಹತ್ತಿರದಿಂದ ೫೦ ಕಿಲೋಮೀಟರ್ ಗೂ ಮೀರಿ ಇರುವ ಮೌಂಟ್ ಎವೆರೆಸ್ಟ್ ಕಾಣುವುದರಿಂದ ಅದು ಇಲ್ಲೆ ಹೆಚ್ಚು ಅಂದರೆ ೧೫-೨೦ ಕಿಮಿ ಒಳಗೆ ಇರಬಹುದು ಎಂದುಕೊಳ್ಳುತ್ತೀರ ಆದರೆ ಎಷ್ಟು ನಡೆದರೂ ತಲುಪುವುದಿಲ್ಲ!
ತಿರುವಿನಲ್ಲಿ ಕಂಡ ಎವೆರೆಸ್ಟ್, ಎಡಗಡೆಯ ತುದಿಯಲ್ಲಿ ಕಾಣುವ ಗುಪ್ಪೆ, ಮಧ್ಯದಲ್ಲಿ ಚೂಪು ಚೂಪಾಗಿ ನೂಪ್ಸೆ, ಬಲಗಡೆಯ ತುದಿಯಲ್ಲಿ ಹೆಡೆಯಂತೆ ನಿಂತ ಜೋಡಿ ಪರ್ವತ ಅಮ-ದಬ್ಲಮ್

ಮೇ ೧೦ ಹತ್ತಿರ ಬರುತ್ತಿದ್ದರಿಂದ ಯಾವ ಸಮಯದಲ್ಲಿ ಬೇಕಾದರೂ ಒಲಂಪಿಕ್ಸ್ ಜ್ಯೋತಿ ಎವೆರೆಸ್ಟ್ ತುದಿ ಮುಟ್ಟುವುದಿತ್ತು. ನಾವು ದಾರಿಯಲ್ಲಿ ಹಿಂತಿರುಗಿ ಬರುವರನ್ನು ಒಲಂಪಿಕ್ಸ್ ಜ್ಯೋತಿಯ ಬಗ್ಗೆ ವಿಚಾರಿಸುತ್ತಿದ್ದೆವು. ನಮಗೆ ದಾರಿಯಲ್ಲಿ ಓರ್ವ ಮಹಿಳೆ ಸಿಕ್ಕಳು. ಅವಳು ಇಬಿಸಿ (ಎವೆರೆಸ್ಟ್ ಬೇಸ್ ಕ್ಯಾಂಪ್) ಯಲ್ಲಿ ಇದ್ದು ಬಂದವಳು. ಮೇ ರಂದು ಅದು ತುದಿ ಮುಟ್ಟಿತೆಂದು, ಅಲ್ಲಿ ಪೂರ್ತಿ ’media blackout’ ಮಾಡಿದ್ದಲ್ಲದೆ, ಕೇವಲ ಎವೆರೆಸ್ಟ್ ಹತ್ತುವ ಪರ್ಮಿಟ್ ಇರುವವರನ್ನು ಬಿಟ್ಟು ಮಿಕ್ಕೆಲ್ಲದವರನ್ನು (ವೈದ್ಯರು, ಸಪೋರ್ಟಿಂಗ್ ಸ್ಟಾಫುಗಳು) ಎಬಿಸಿಯಿಂದ ಕೆಳಗೆ ಕಳುಹಿಸಿದ್ದರಂತೆ. ಆದ್ದರಿಂದಲೇ ಬಹುಶಃ ಎಲ್ಲಾ ಲಾಡ್ಜುಗಳಲ್ಲಿ ಬರೀ ಪರ್ವತಾರೋಹಿಗಳು ತುಂಬಿದ್ದರು ! 'It was a very special event' ಅಂತ ಹೇಳಿದಳು. ನಾವು ನಾಮ್ ಚೆ ಇದ್ದ ಪರ್ವತವನ್ನು ಪೂರ್ತಿ ಇಳಿದು ಇನ್ನೊಂದು ಪರ್ವತ ಹತ್ತಲು ಶುರುಮಾಡಿದೆವು. ನಿಧಾನವಾಗಿ ಹತ್ತುತ್ತಿದ್ದೆವು. ನಮಗೆ ಯಾವ ಅವಸರವೂ ಇರಲಿಲ್ಲ. ಮನಸ್ಸಿನಲ್ಲಿ ಇಬಿಸಿ ತಲುಪುವುದೊಂದೆ. ನಾನು ಶೀಲಾ ಅವರಿಗೆ "ನೀವು ಪೋರ್ಟರ್ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದಿರಿ" ಎಂದೆ. ಅದಕ್ಕವರು "ಹೌದು, ನನಗಾಗಲೆ ವಯಸ್ಸಾಗಿದೆ. ಇದು ಬಹುಶಃ ಒಂದೇ ಅವಕಾಶ. ಅದಕ್ಕಾಗಿ ನಾನು ಎಲ್ಲವೂ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು, ಈಗ ನಾನು ಚೀಲ ಹೊತ್ತರೆ, ನಾಳೆ ನೆಡೆಯಲಾಗದಿದ್ದರೆ ? ". ಹತ್ತುತ್ತಾಯಿರುವಾಗ ನಮಗೆ ಬೆಂಗಳೂರಿ ಇಬ್ಬರು ಸಿಕ್ಕರು. ವಸುಮತಿಯವರಿಗೆ ಅವರು ಗೊತ್ತಿದ್ದರು. ’ ನೀವಿಲ್ಲಿ !’ ಅಂತ ಇಬ್ಬರೂ ಹೇಳಿಕೊಂಡರು. ಅವರು ವಸುಮತಿಯವರಿಗೆನಿಧಾನವಾಗಿ ಮುಂದುವರಿಯಿರಿ. ತುಂಬಾ ನೀರು ಕುಡಿಯಿರಿ. ಎಷ್ಟು ಸಾಧ್ಯವೋ ಅಷ್ಟು ಬೆಳ್ಳುಳ್ಳಿ ತಿನ್ನಿರಿಎಂದು ಸಲಹಿದರು. ಆಲ್ಟಿಟ್ಯುಡ್ ಸಿಕ್ನೆಸ್ ಇಂದಾಗಿ ಕೆಲವರನ್ನು ಸ್ಟ್ರೆಚರ್ ನಲ್ಲಿ ತೆಗೆದು ಕೊಂಡು ಹೋದದ್ದನ್ನು ಅವರು ನೋಡಿದರಂತೆ. ಅದರಲ್ಲಿ ಒಬ್ಬನ ಸ್ಥಿತಿಯೊಂತು ಚಿಂತಾಜನಕವಾಗಿದ್ದು ಬದುಕುವ ಹಾಗೆ ಕಾಣುವುದಿಲ್ಲ ಎಂದರು. ನಾವು ದಿನಾಗಲು ಜನಗಳನ್ನು ರಕ್ಷಿಸುವ ಹೆಲಿಕಾಪ್ಟರ್ ಹೀಗಿಂದ ಹಾಗೆ ಹೋಗುವುದನ್ನು ನೋಡುತ್ತಿದ್ದೆವು. ಇಬಿಸಿವರೆಗೂ ಹೆಲಿಕಾಪ್ಟರ್ ಹೋಗುವುದಿಲ್ಲ. ಅಲ್ಲಿನ ಗಾಳಿಯಲ್ಲಿ ಅದು ಮೇಲೇರುವುದಿಲ್ಲ. ವಸುಮತಿಯವರು ಸ್ಮಿತ ಹಾಗು ರೋಶಿನ್ ಲಾಲ್ ಅವರನ್ನು ಖಾಜಿ ಜೊತೆ ಮುಂದೆ ಹೋಗಲು ಕಳುಹಿಸಿದರು. ಅವರು ಅಲ್ಲಿ ಹೋಗಿ ಲಾಡ್ಜ್ ಹಿಡಿದು, ಅದಕ್ಕೆ ತಗಲುವ ವೆಚ್ಚವನ್ನು ನಿರ್ದರಿಸಬೇಕಿತ್ತು.

ನಾವು ಮಧ್ಯಾನ್ಹದ ಹೊತ್ತಿಗೆ ತೆಂಗ್ ಬೋ ಚೆಗೆ ಬಂದು ತಲುಪಿದೆವು. ಅದು ೧೨,೬೯೩ ಅಡಿ ಎತ್ತರದಲ್ಲಿದೆ. ಬಹಳ ಚಳಿ. ಹಲ್ಲು ಕಟ ಕಟ ಎನ್ನುತ್ತಿದ್ದರೆ, ಕಿವಿ ನೋಯುತ್ತಿತ್ತು. ಅಲ್ಲಿ ಒಂದು ಬಹಳ ಸುಂದರವಾದ ಬೌದ್ದ ದೇಗುಲ (Monastery) ಇದೆ.

ಮೊನಾಸ್ಟ್ರಿಯ ಹೊರಗಡೆಯ ಡ್ರಾಗನ್

ಅದು ಬಹಳ ಹಳೆಯದಾದ ಹಾಗು ಅತಿ ಎತ್ತರದಲ್ಲಿರುವ ದೇಗುಲ. ಮೌಂಟ್ ಎವೆರೆಸ್ಟ್ ಹತ್ತುವವರು, ಲುಕ್ಲಾ ಯಿಂದ ಎಬಿಸಿಯವರೆಗೆ ನಡೆದೇ ಹೋಗುತ್ತಾರೆ. ಇದರಿಂದ ಅವರಿಗೆ ಬೇಕಾದ ಅಕ್ಲಿಮಟೈಸೇಶನ್ ಸಿಗುತ್ತದೆ. ದಾರಿಯಲ್ಲಿ ಸಿಗುವ ದೇಗುಲದಲ್ಲಿ ಪರ್ವತಾರೋಹಿಗಳ ಜೊತೆಯ ಪೋರ್ಟರುಗಳು ತಾಯಿ ಚೋಮೋಲುಂಗ್ಮಗೆ ಹತ್ತುವ ಮೊದಲು ಪ್ರಾರ್ಥಿಸುತ್ತಾರೆ. ದೇಗುಲದ ಹಿಂದೆ ಮೌಂಟ್ ಎವೆರೆಸ್ಟ್ ಕಾಣುತ್ತದೆ. ತೇನ್ ಸಿಂಗ್ ಎವೆರೆಸ್ಟ್ ತುದಿ ಮುಟ್ಟಾದ ತಕ್ಷಣ ದೇಗುಲದ ದಿಕ್ಕಿನಲ್ಲಿ ನೋಡಿದನಂತೆ, ಆದರೆ ಮೋಡ ಮುಚ್ಚಿದ್ದರಿಂದ ಅದು ಕಾಣದೇ ಅವನು ಮಸ್ಸಿನಲ್ಲೇ ವಂದಿಸಿದನಂತೆ. ಅಲ್ಲಿ ಕೆಲವೇ ಲಾಡ್ಜ್ಗಳಿದ್ದವು. ನಮ್ಮ್ ಲಾಡ್ಜ್ ಹೆಸರು ಗೊಂಬು ಲಾಡ್ಜ್.
ಬಲಗಡೆ ಅಂಚಿನಲ್ಲಿರುವುದು ಗೊಂಬು ಲಾಡ್ಜ್, ಹಿಂದೆ ಎವೆರೆಸ್ಟ್

ಅಲ್ಲಿ ಬಹಳ ಕೋಣೆಗಳಿದ್ದವು. ಅವು ತೀರ ಕಿರಿದಾಗಿದ್ದು, ಎರಡೆರಡು ಹಾಸಿಗೆಗಳಿದ್ದವು. ಲಾಡ್ಜ್ ನವರ ಹತ್ತಿರ ಇಂಟರ್ ನೆಟ್ ಸಹ ಇತ್ತು. ಆದರೆ ಅದು ದುಬಾರಿಯಾಗಿದ್ದುದ್ದರಿಂದ ಅಷ್ಟಲ್ಲದೆ ನಾವು ನಮ್ಮ ಪ್ರಪಂಚದಿಂದ ಬಹಳ ದೂರ ಬಂದು ಅದರೊಡನೆಯ ಭಾವನಾತ್ಮಕ ಸಂಭಂದ ಸ್ವಲ್ಪ ಮಟ್ಟಿಗೆ ಕಡಿದುಹೋದಂತಾಗಿದ್ದುದ್ದರಿಂದ ಯಾರಿಗೂ ಅದರ ಬಗ್ಗೆ ಗಮನ ಹರಿಯಲಿಲ್ಲ. ಲಾಡ್ಜಿನ ಹಿಂದೆ ಒಂದು ಫ್ರೆಂಚ್ ಬೇಕರಿ ಇತ್ತು. ಅಲ್ಲಿಂದ ಘಮ ಘಮ ಪರಿಮಳ. ನಾವು ಊಟಕ್ಕೆ ಮೊದಲು ದೇಗುಲಕ್ಕೆ ಹೊರಟೆವು. ಅದು ಬಹಳ ಸುಂದರವಾದ ದೇಗುಲ. ನಾವು ಅಲ್ಲಿಯ ಪ್ರಾರ್ಥನಾ ಚಕ್ರಗಳನ್ನು ತಿರುಗಿಸಿದೆವು.

ಪ್ರಾರ್ಥನಾ ಚಕ್ರಗಳ ಮೇಲೆಓಂ ಮೆ ಪೈ ಮೆ ಹೊಂ

ಅಲ್ಲಿಯ ಲೋಕಲ್ ಪೂಜಾರಿ (Monk) ಬಂದು ನಮಗಾಗಿ ಬಾಗಿಲುತೆರೆದು, ದೀಗುಲದ ಬಗ್ಗೆ, ಅಲ್ಲಿ ಇರುವ ಗ್ರಂಥಗಳ ಬಗ್ಗೆ, ಇಡೀ ವಿಶ್ವ ಯಾವ ಕಾಲ ಘಟ್ಟದಲ್ಲಿ ಇದೆ. ಮುಂದೆ ಏನಾಗುತ್ತದೆ ಎಂದು ವಿವರಿಸಿದ. ಅವನ ಹೆಸರು ನಿಂಗ್ಮ. ಅವನ ಇಂಗ್ಲಿಷ್ ಎಷ್ಟು ತಮಾಷಿಯಾಗಿತ್ತೆಂದರೆ ನನಗೆ ಇಡಿ ವಿಶ್ವ ಒಂದು ಕಾಮಿಡಿ ಸಿನೆಮಾ ಒಳಗೆ ಸಿಕ್ಕಿಹಾಕಿಕೊಂಡು ಗಿರಿ ಗಿರಿ ಸುತ್ತುತ್ತಾ ಇದೆ ಅನ್ನಿಸಲು ಶುರುವಾಯಿತು. ಅಂತು ನಾವು ಅವನೊಡನೆ ಫೋಟೊ ಹೊಡೆಸಿಕೊಂಡು ಹೊರನಡೆದೆವು.

ನಿಂಗ್ಮ ಜೊತೆ ನಾನು, ಪ್ರಿಯ

ಸಂದೀಪವರ ಗ್ಯಾಂಗಿಗೆ ದಿನಾಗಲೂ ದಾಲ್ ರೈಸ್ ಮತ್ತು ಅದೆಂಥದೊ ಸೊಪ್ಪಿನ ಪಲ್ಯ ತಿಂದು ತಿಂದು ಸಾಕಾಗಿ, ತಮಗೆ ಬೇಕಾದ ಚಿಕನ್ ಫ್ರ್ಯನ್ನು ಆರ್ಡರ್ ಮಾಡಲು ಶುರುಮಾಡಿದರು. ಅವರೇ ದುಡ್ಡು ಕೊಡಬೇಕಾಗಿದ್ದರಿಂದ ವಸುಮತಿಯವರಿಗೆ ಅದರಲ್ಲಿ ಯಾವ ತೊಡಕೂ ಕಾಣಲಿಲ್ಲ. ಚಿಕನ್ ತಿಂದಾದ ಮೇಲೆ, ’ಥೂ ಸುಡುಗಾಡು, ಇವರಿಗೆಲ್ಲಾ ಸರಿಯಾಗಿ ಮಾಡಲು ಬರುವುದೇ ಇಲ್ಲಎಂದು ಬೈಗುಳಗಳು ಇದ್ದಿದ್ದೇ. ನಮಗೆ ಏನು ತಿನ್ನಲೂ ಮನಸ್ಸಿರಲಿಲ್ಲ. ಹಾಗಾಗಿ ತಟ್ಟೆಯಲ್ಲಿ ಏನು ಹಾಕಿದರೂ ಒಂದೇ ಅನಿಸುತ್ತಿತ್ತು. ನಾವೆಲ್ಲಾ ಅಲ್ಲಿ ಡಂಬ್ ಶೆರಾಡ್ಸ್ ಆಟವನ್ನು ನಮ್ಮ ಹತ್ತಿರವಿದ್ದ ಎಲ್ಲಾ ಬೆಚ್ಚನೆಯ ಬಟ್ಟೆಗಳನ್ನು ಹಾಕಿಕೊಂಡು ಆಡಿದೆವು. ನಾಳೆ ಮರೆಯದೆ ನನ್ನ ಟೀ ಶರ್ಟ್ ಬದಲಾಯಿಸಬೇಕೆಂದು ನೆನಪಿಸಿಕೊಂಡೆ. ನಾವು ಎರಡುದಿನಕ್ಕೊಂದು ಟೀ ಶರ್ಟ್ ಎಂದು ತಂದಿದ್ದರೂ ಚಳಿಯಲ್ಲಿ ಬದಲಾಯಿಸದೆ ಎಲ್ಲರಿಂದಲೂ ಕಮಟು ವಾಸನೆ ಬರುತ್ತಿತ್ತು. ಮತ್ತೊಂದು ಥಂಡಿ ರಾತ್ರಿ ಕಳೆಯಿತು.

2 comments:

Unknown said...

ಈಶಾನ್ಯೆಯವರೆ
ಲೇಖನ ತುಂಬಾ ಚೆನ್ನಾಗಿದೆ. ಪ್ರತಿ ಎಪಿಸೋಡನ್ನು ಕಾತರದಿಂದ ಕಾಯುತ್ತಿರುತ್ತೇವೆ. ಯಾಕ್ ಪ್ರಾಣಿಗಳ ಸ್ವಭಾವದ ಬಗ್ಗೆ ಬರೆಯುವಾಗ ಮತ್ತು ನನಗೆ 'ಇಡಿ ವಿಶ್ವ ಒಂದು ಕಾಮಿಡಿ ಸಿನೆಮಾ ಒಳಗೆ ಸಿಕ್ಕಿಹಾಕಿಕೊಂಡು ಗಿರಿ ಗಿರಿ ಸುತ್ತುತ್ತಾ ಇದೆ ಅನ್ನಿಸಲು ಶುರುವಾಯಿತು.' ಎಂಬ ವಾಕ್ಯಗಳನ್ನು ಓದಿದಾಗ ತೇಜಸ್ವಿ ನೆನಪಾಗುತ್ತಾರೆ. ಕ್ಷಮಿಸಿ, ನಮಗರಿವಿಲ್ಲದೆ ತೇಜಸ್ವಿಯ ಬರಹಗಳೊಂದಿಗೆ ಹೋಲಿಕೆ ಶುರುಮಾಡಿಬಿಟ್ಟಿರುತ್ತದೆ ನಮ್ಮ ಮನಸ್ಸು. ಕೇವಲ ಸಾಹಿತ್ಯ ಓದಿದಂತೆ ತೇಜಸ್ವಿಯವರನ್ನು ಓದಲು ಸಾಧ್ಯವೇ ಇಲ್ಲ! ನಮ್ಮ ಬದುಕಿನ ಕ್ರಿಯೆಯ ಮೇಲೇಯೇ ಪ್ರಭಾವ ಬೀರುವಷ್ಟು ಶಕ್ತಿ ಅವರ ಬರಹಗಳಿಗಿದೆ. ಆ ನಿಟ್ಟಿನಲ್ಲಿ ನಿಮ್ಮ ಲೇಖನದಲ್ಲಿ ಅಲ್ಲಲ್ಲಿ ಇಣುಕುತ್ತಿರುವ ವಾಕ್ಯಗಳು ನಮ್ಮ ಮನಸ್ಸಿನ ಮೇಲೆ ಕೆಲಸ ಮಾಡುತ್ತಿವೆ ಎಂದೇ ನಾನು ಭಾವಿಸುತ್ಥೇನೆ. ಧನ್ಯವಾದಗಳು

Unknown said...

madm

i am joined your blog. i am very interesting about your father writing and much interest about Environment and i am basically Env Engineer

i seen your Everest base camp article its very good. i get this blog address from Vijayakarnataka 28th July 2010 edition.

please help me reg how to write in Kannada in this blog.
Manu S Besgarahalli